PANJANDHAYA BANTA VAIDYANATHA

KORAGATHANIYA DAIVADA AADISTHALA

About Us
Introduction about the history & origin of KORAGATANIYA

ತುಳುನಾಡು ದೈವದೇವರುಗಳ ನೆಲೆಬೀಡು. ಇಲ್ಲಿಯ ಜನ, ಸಂಸ್ಕೃತಿ, ಆಚಾರ-ವಿಚಾರ, ಆರಾಧನೆ, ನಂಬಿಕೆ-ನಡಾವಳಿ ಎಲ್ಲವೂ ವಿಶಿಷ್ಟ ಮತ್ತು ವಿಶೇಷವುಳ್ಳದ್ದಾಗಿದೆ. ದೈವಾರಾಧನೆ ತುಳುನಾಡಿನ ಮೂಲ ಆರಾಧನೆಗಳಲ್ಲಿ ಒಂದಾಗಿದ್ದು, ಇಲ್ಲಿಯ ಜನ ಭಯ-ಭಕ್ತಿಗಳಿಂದ ದೈವಗಳ ಮೇಲೆ ನಂಬಿಕೆಯಿಟ್ಟು ಆರಾಧನೆ ಮಾಡುತ್ತಾ ಬಂದಿದ್ದಾರೆ. ಬಹಳ ಸರಳವಾಗಿ ಈ ಆರಾಧನೆಗಳು ತಲೆತಲಾಂತರದಿಂದ ನಡೆದುಕೊಂಡು ಬಂದಿದ್ದು, ನಂಬಿಕೊಂಡವರಿಗೆಲ್ಲಾ ದೈವ ಇಂಬು ಕೊಡುತ್ತಾ ಕಷ್ಟಕಾರ್ಪಣ್ಯಗಳನ್ನು ದೂರಮಾಡುತ್ತಾ ಬದುಕನ್ನು ಚೆಲುವಾಗಿಸಿದೆ-ಗೆಲುವಾಗಿಸಿದೆ.
ದೈವಗಳನ್ನು ಪ್ರಾಣಿಮೂಲ, ಮನುಷ್ಯಮೂಲ ಮತ್ತು ಪುರಾಣ ಮೂಲಗಳ ದೈವಗಳೆಂದು ಆರಾಧನೆ ಮಾಡುತ್ತಿರುವುದು ವಿಶೇಷವಾಗಿ ಕಾಣಬರುತ್ತಿದೆ. ಮನುಷ್ಯ ಮೂಲದಿಂದ ಬಂದ ದೈವಗಳು ಅಸಮಾನತೆ ಮತ್ತು ಅನ್ಯಾಯಗಳ ವಿರುದ್ಧ ಸಿಡಿದು ನಿಂತು ಕಾಯಬಿಟ್ಟು ಮಾಯ ಸೇರಿ ವಿಶೇಷ ಶಕ್ತಿಗಳನ್ನು ಪಡೆದು ಆರಾಧನೆಗೆ ಒಳಗಾದವರು. ಇಂಥವರಲ್ಲಿ ಕೊರಗತನಿಯ ಅಥವಾ ಕೊರಗಜ್ಜ ದೈವವೂ ಬಹಳ ಮಹತ್ವದ್ದಾಗಿದೆ.
ಕೊರಗತನಿಯನ ತಂದೆ ‘ವರವನ ಓಡಿ’, ತಾಯಿ ‘ಕೊರಪೊಲುಮೈರೆ’ ತನಿಯನು ಮೂವತ್ತು ದಿನದ ಮಗುವಾಗಿದ್ದಾಗಲೇ ಅವನ ತಾಯಿಯು ತೀರಿಕೊ೦ಡಳು, ಆಮೇಲೆ, ತಂದೆಯೂ ತೀರಿಕೊಂಡನು. ಕೊರಗತನಿಯನಿಗೆ ದಿಕ್ಕು ದೆಸೆ ಇಲ್ಲದಾಯಿತು. ನಡುರಾತ್ರಿಯ ಹೊತ್ತಿಗೆ ತನಿಯನು ಜವಂದ ಮಲೆ ಬಿಟ್ಟು ಹೊರಟನು. ಅವನು ಬೊಳುಂಗರಿಯ ಹೊಯಿಗೆಯಲ್ಲಿ ದಡ್ಡಲಕಾಯಿಯನ್ನು ತೆಂಗಿನಕಾಯಿ ಎಂದೂ ಹೊಯಿಗೆಯನ್ನು ಅಕ್ಕಿ ಎಂದೂ ಇಟ್ಟು ಪೂರ್ವದಿಕ್ಕಿಗೆ ಮುಖಮಾಡಿ ದೇವರಿಗೆ ಕೈ ಮುಗಿದನು. ಆಗ ಅಲ್ಲಿ ಅವನಿಗೆ ಮೈರಕ್ಕೆ ಬೈದೆತಿ ಕಾಣಿಸಿಕೊಂಡಳು. ಅವಳು ಕೊರಗತನಿಯನ ಅನಾಥ ಸ್ಥಿತಿಯನ್ನು ಕಂಡು ಮನಸ್ಸು ಕರಗಿ ಅವನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಮಗನ ಹಾಗೆ ಪ್ರೀತಿಯಿಂದ ಸಾಕಿದಳು.
Scroll to Top